ಮಕ್ಕಳ ಪರ ಮಾತನಾಡಿ, ಶಿಕ್ಷಕರನ್ನು ದೂರುವ ಪಾಲಕರಿಗೆ ಕಿವಿ ಮಾತು

ಶಿಕ್ಷಕರು ಪ್ರತಿಯೊಬ್ಬರ ಜೀವನದಲ್ಲೂ ಮಹತ್ವವಾದ ಪಾತ್ರ. ಗುರುವಿಲ್ಲದೆ ವಿದ್ಯೆ ಕಲಿಯುವುದು ಸುಲಭವಲ್ಲ. ಕೇವಲ ಶಾಲೆಯಲ್ಲಿ ಕಲಿಸುವ ಪಾಠಗಳು ಮಾತ್ರವಲ್ಲ ಜೀವನದ ಪ್ರತಿಯೊಂದು ಹಂತದಲ್ಲೂ ಗುರು ಕಲಿಸಿದ ವಿದ್ಯೆ, ಶಿಸ್ತು ನೆರವಿಗೆ ಬರುತ್ತದೆ. ಒಬ್ಬ ವ್ಯಕ್ತಿಯನ್ನು ತಿದ್ದಿ, ತೀಡುವ ಶಕ್ತಿ ಗುರುವಿಗಿದೆ.

ಶಿಕ್ಷಕರ ವೃತ್ತಿ ಅಷ್ಟು ಸುಲಭವಲ್ಲ. ಬದಲಾಗುತ್ತಿರುವ ಶಿಕ್ಷಣ ಪದ್ಧತಿ, ಬದಲಾಗುತ್ತಿರುವ ಮಕ್ಕಳ ಜೊತೆ ಅವರು ಜೀವನ ನಡೆಸಬೇಕು. ಸಾಮಾನ್ಯವಾಗಿ ಮನೆಯಲ್ಲಿ ಒಂದು ಮಕ್ಕಳನ್ನು ಸಂಭಾಳಿಸುವುದು ಪಾಲಕರಿಗೆ ಕಷ್ಟ. ಹಾಗಿರುವಾಗ 20-30 ಮಕ್ಕಳನ್ನು ಶಿಕ್ಷಕರು ನೋಡಿಕೊಳ್ತಾರೆ. ಮೊದಲು ಮಕ್ಕಳಿಗೆ ಹೊಡೆದು ಬುದ್ಧಿ ಕಲಿಸುತ್ತಿದ್ದರು. ಈಗ ಶಿಕ್ಷಕರು ಮಕ್ಕಳಿಗೆ ಕೈ ಎತ್ತುವುದಿರಲಿ, ಬೈಲೂ ಬಾರದು ಎನ್ನುತ್ತಾರೆ ಪಾಲಕರು. ಮಕ್ಕಳನ್ನು ಅತಿ ಮುದ್ದು ಮಾಡುವ ಪಾಲಕರು, ಶಿಕ್ಷಕರ ಜೊತೆ ನಡೆದುಕೊಳ್ಳುವ ರೀತಿ, ಮಕ್ಕಳ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಇಂದು ಶಿಕ್ಷಕರ ಜೊತೆ ಪಾಲಕರು ಹೇಗೆ ನಡೆದುಕೊಳ್ಳಬೇಕು ಎಂಬ ವಿಷಯವನ್ನು ಹೇಳ್ತೆವೆ.  

ನನ್ನ ಮಗು ಎಂದಿಗೂ ತಪ್ಪು ಮಾಡುವುದಿಲ್ಲ:
ಪಾಲಕರು -ಶಿಕ್ಷಕರ ಮೀಟಿಂಗ್ ನಡೆಯುತ್ತಿರುತ್ತದೆ. ಮೀಟಿಂಗ್ ನಲ್ಲಿ ಶಿಕ್ಷಕರು, ಮಕ್ಕಳ ಬಗ್ಗೆ ದೂರು ನೀಡಿದ್ರೆ ಪಾಲಕರ ಕೋಪ ನೆತ್ತಿಗೇರಿರುತ್ತದೆ. ಪಾಲಕರು ಸಾಮಾನ್ಯವಾಗಿ, ತಮ್ಮ ಮಗು ಮೊದಲಿನಂತೆ ಏಕೆ ಹೆಚ್ಚು ಅಂಕಗಳನ್ನು ಗಳಿಸುತ್ತಿಲ್ಲ ಎಂಬುದನ್ನು ತಿಳಿಯಲು ಬಯಸ್ತಾರೆ. ಈ ವೇಳೆ ಮಗು ತಪ್ಪು ಮಾಡ್ತಿದೆ, ಬೇರೆಯವರ ಜೊತೆ ಸರಿಯಾಗಿ ವರ್ತಿಸುತ್ತಿಲ್ಲ,  ಗಮನ ಬೇರೆಡೆಯಿದೆ ಎಂಬ ಸಂಗತಿಯನ್ನು ಶಿಕ್ಷಕರು ಹೇಳಿದ್ರೆ ಪಾಲಕರು ಒಪ್ಪುವುದಿಲ್ಲ. ತನ್ನ ಮಗು ತಪ್ಪು ಮಾಡಲು ಸಾಧ್ಯವೇ ಇಲ್ಲ ಎಂದು ವಾದ ಮಾಡುತ್ತಾರೆ. ತಮ್ಮ ಮಗುವಿನ ಸಾಮರ್ಥ್ಯವನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗದಿರುವುದು ಶಿಕ್ಷಕರ ಅಸಮರ್ಥತೆ ಎಂದು ಪೋಷಕರು ನಂಬುತ್ತಾರೆ. ಆದ್ರೆ ದೂರು ಹಾಗೂ ಮಗುವಿನ ಕಡೆ ನಿಮ್ಮ ರಕ್ಷಣಾತ್ಮಕ ಮನೋಭಾವ ಕಡಿಮೆ ಮಾಡಬೇಕು. ಶಿಕ್ಷಕರು ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಮಗುವಿನ ಬಗ್ಗೆ ಸೃಜನಾತ್ಮಕ ಚರ್ಚೆಗಳನ್ನು ಶಿಕ್ಷಕರ ಜೊತೆ ಮಾಡಿ.

ಪಿಟಿಎಂನಲ್ಲಿ ಚರ್ಚೆಯಾದ ವಿಷಯವನ್ನು ಪಾಲಿಸಿ:
ಪಾಲಕರು-ಶಿಕ್ಷಕರ ಮೀಟಿಂಗ್ ನಲ್ಲಿ ಪಾಲಕರು ಪಾಲ್ಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಶಿಕ್ಷಕರ ಮುಂದಿಡುತ್ತಾರೆ. ಅದಕ್ಕೆ ಶಿಕ್ಷಕರು ಸಲಹೆ ನೀಡಿರುತ್ತಾರೆ. ಆದ್ರೆ ಈ ಸಲಹೆಯನ್ನು ಪಾಲಕರು ಮನೆಗೆ ಬಂದ ನಂತ್ರ ನಿರ್ಲಕ್ಷ್ಯಿಸುತ್ತಾರೆ. ಶಿಕ್ಷಕರ ಸಲಹೆ ಪಾಲಿಸದೆ ಹೋದಲ್ಲಿ ನಿಮ್ಮ ಸಮಸ್ಯೆಯಿಂದ ಹೊರ ಬರಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ.

ಮನೆಯಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಗಮನ ನೀಡದಿರುವುದು:
ಮಕ್ಕಳ ಅಧ್ಯಯನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಶಿಕ್ಷಕರ ಮೇಲೆ ಬಿಡಬಾರದು. ಇದರಿಂದ ನಿಮ್ಮ ಮಗುವಿನ ಪ್ರಗತಿಗೆ ಹಿನ್ನಡೆಯಾಗುತ್ತದೆ. ಪೋಷಕರಾಗಿ ನೀವು ನಿಮ್ಮ ಮಗುವಿನೊಂದಿಗೆ ಸ್ವಲ್ಪ ಸಮಯ ಕಳೆಯಬೇಕು. ಶಾಲೆಯಲ್ಲಿ ಕಲಿಸಿದ ಪಾಠ,ಹೋಮ್ ವರ್ಕ್ ಬಗ್ಗೆ ಗಮನ ಹರಿಸಬೇಕು. ಅನೇಕ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತ್ರ ಮಕ್ಕಳ ಸಂಪೂರ್ಣ ಜವಾಬ್ದಾರಿ ಶಿಕ್ಷಕರದ್ದು ಎಂದುಕೊಳ್ತಾರೆ. ಅವರು ಏನು ಮಾಡಿದ್ದಾರೆ ಎಂಬುದನ್ನೂ ಗಮನಿಸುವುದಿಲ್ಲ.

ಶಿಕ್ಷಕರ ಜೊತೆ ಅಸಭ್ಯ ಮಾತು:
ಶಿಕ್ಷಕರಿಗೆ ಹಣ ನೀಡಲಾಗ್ತಿದೆ,ಅವರು ಕಲಿಸಬೇಕು ಎಂಬ ಸ್ವಭಾವ ಅನೇಕರಿಗಿರುತ್ತದೆ.ಅದೇ ಕಾರಣಕ್ಕೆ ಶಿಕ್ಷಕರನ್ನು ಕೀಳಾಗಿ ನೋಡ್ತಾರೆ. ಅವರ ಜೊತೆ ಸರಿಯಾಗಿ ಮಾತನಾಡುವುದಿಲ್ಲ. ಶಿಕ್ಷಕರಿಗೆ ಗೌರವ ನೀಡುವುದು ಬಹಳ ಮುಖ್ಯ. ಮಕ್ಕಳಿಗೆ ವಿದ್ಯೆ ಕಲಿಸುತ್ತಿರುವ ಗುರುವಿಗೆ ನೀವು ಗೌರವ ನೀಡಿದ್ರೆ ಮಕ್ಕಳು ಅದನ್ನು ಕಲಿಯುತ್ತಾರೆ.

ಶಿಕ್ಷಕರಿಗೆ ಮತ್ತೊಂದು ಮಗುವಿನ ಬಗ್ಗೆ ದೂರು:
ಬೇರೆ ಮಗುವಿನ ಬಗ್ಗೆ ಶಿಕ್ಷಕರ ಮುಂದೆ ದೂರಬಾರದು. ಅಂದ್ರೆ ಆತನ ನಡವಳಿಕೆಯಿಂದ ನಮ್ಮ ಮಕ್ಕಳು ಹಾಳಾಗ್ತಿದ್ದಾರೆ,ಅವರ ಮೇಲೆ ಕೆಟ್ಟ ಪರಿಣಾಮ ಬೀರ್ತಿದೆ ಎಂದು ಪೋಷಕರು ದೂರು ನೀಡ್ತಾರೆ. ಶಿಕ್ಷಕರಿಗೆ ಅವರ ಎಲ್ಲಾ ವಿದ್ಯಾರ್ಥಿಗಳು ವಿಶೇಷವಾಗಿರ್ತಾರೆ. ಅವರು ಯಾವುದೇ ಕಾರಣಕ್ಕೂ ಅವರನ್ನು ದೂರಲು ಮತ್ತು ಅವಮಾನಿಸಲು ಸಾಧ್ಯವಿಲ್ಲ.